This version of the page http://vijaykarnataka.indiatimes.com/articleshow/37971488.cms (0.0.0.0) stored by archive.org.ua. It represents a snapshot of the page as of 2014-08-29. The original page over time could change.
ವಿಕ ವಿಶೇಷ: ರೈಲ್ವೆ ಬಜೆಟ್: ರಾಜ್ಯದ ನಿರೀಕ್ಷೆ ಮಹಾಪೂರ - Indiatimes Vijaykarnatka
ADVERTISEMENT
  • ಮುಖಪುಟ
  • ದೇಶ-ವಿದೇಶ
  • ಕರ್ನಾಟಕ
  • ನಿಮ್ಮ ಜಿಲ್ಲೆ
  • ಕ್ರೀಡೆ-ಕ್ರಿಕೆಟ್
  • ಧರ್ಮ-ಜ್ಯೋತಿಷ್ಯ
  • ಸಿನಿಮಾ
  • ವಾಣಿಜ್ಯ
  • ವಿಚಾರ ಮಂಟಪ
  • ವಿಕ ಬ್ಲಾಗ್ಸ್
  • ಫೋಟೋ ಗ್ಯಾಲರಿ
  • ಚುನಾವಣೆ 2014
  • ರಾಜ್ಯ ರಾಜಕೀಯ
  • ಕರ್ನಾಟಕ
  • ಕ್ಲೀನ್ ಪಾಲಿಟಿಕ್ಸ್
  • ವಿಕೆ ಡಿಬೇಟ್ಸ್
  • ಚುನಾವಣೆ 2014
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಕರ್ನಾಟಕ » ರಾಜ್ಯ ರಾಜಕೀಯ

ವಿಕ ವಿಶೇಷ: ರೈಲ್ವೆ ಬಜೆಟ್: ರಾಜ್ಯದ ನಿರೀಕ್ಷೆ ಮಹಾಪೂರ

ಲೇಖನ
ಅನಿಸಿಕೆಗಳು
Post a comment
Email this article
Print this article
Save this article
My Saved articles
Reduce font size
Increase font size
Share on Messenger
Share on facebook
Share on Digg
Share on Reditt
Google BookmarksNewsvine
Live BookmarksTechnorati
Yahoo BookmarksBlogmarks
Del.icio.usApnaCircle
Tweet
ಕೇಂದ್ರ ಬಜೆಟ್: ನಾಲ್ವರು ಸಚಿವರ ಮೇಲೆಯೇ ಎಲ್ಲರ ಕಣ್ಣು

ಮಂಗಳವಾರ ಕೇಂದ್ರ ಸರಕಾರದ ರೈಲ್ವೆ ಬಜೆಟ್‌ನ್ನು ಕನ್ನಡಿಗ ಸಚಿವ ಡಿ.ವಿ.ಸದಾನಂದ ಗೌಡರು ಮಂಡಿಸುತ್ತಿದ್ದಾರೆ. ಗುರುವಾರ ಮೋದಿ ಸರಕಾರದ ಮೊದಲ ಮುಂಗಡಪತ್ರ ಮಂಡನೆಯಾಗಲಿದೆ. ಈ ಹೊತ್ತಿನಲ್ಲಿ ಕರ್ನಾಟಕದ ನಿರೀಕ್ಷೆಯ ಪಟ್ಟಿ ಬಲು ದೊಡ್ಡದ್ದಿದೆ. ಕೇಂದ್ರ ಸಂಪುಟದಲ್ಲಿ ರಾಜ್ಯದ ನಾಲ್ವರು ಸಚಿವರಿದ್ದಾರೆ. ಇವರಿಂದ ಕರ್ನಾಟಕ ಏನನ್ನು ನಿರೀಕ್ಷಿಸುತ್ತದೆ?
-----

ರೈಲು ಓಡಿಸುತ್ತಾರಾ?
ಡಿ.ವಿ.ಸದಾನಂದ ಗೌಡ ರೈಲ್ವೆ ಸಚಿವ

* ವೈ.ಗ.ಜಗದೀಶ್
ರಾಜ್ಯದ ರೈಲು ಹಳಿಗಳ ಮೇಲೆ ಇನ್ನು ಮುಂದಾದರೂ ಭರಪೂರ ರೈಲುಗಳು ಓಡಾಡಿ, ಹತ್ತಾರು ಪಥಗಳಿರುವ ರೈಲು ಮಾರ್ಗ ಶತಪಥವಾಗಬಹುದೇ ಎಂಬ ನಿರೀಕ್ಷೆ, ಅಪೇಕ್ಷೆ ಕನ್ನಡಿಗರದ್ದು. ಸುಮಾರು ಎರಡು ದಶಕಗಳ ಬಳಿಕ ಪೂರ್ಣ ಬಹುಮತವಿರುವ ಕೇಂದ್ರ ಸರಕಾರದಲ್ಲಿ ಪೂರ್ಣಾವಧಿ ರೈಲ್ವೆ ಸಚಿವರಾಗಿ ಕನ್ನಡಿಗ ಡಿ.ವಿ. ಸದಾನಂದಗೌಡರು ಅಧಿಕಾರರೂಢರಾಗಿರುವುದರಿಂದ ಸಹಜವಾಗಿಯೇ ಆಸೆ ಗರಿಗೆದರಿದೆ. ಸಾಲದ್ದಕ್ಕೆ ಸದಾನಂದಗೌಡರು ತಾವು ''ರೈಲು ಬಿಡುವುದಿಲ್ಲ, ಓಡಿಸುತ್ತೇನೆ'' ಎಂದು ಶಪಥ ಮಾಡಿ ಹೋಗಿದ್ದಾರೆ.

ಕೊರತೆ ಏನು?
* ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ರೈಲುಮಾರ್ಗಗಳ ವಿಸ್ತೀರ್ಣ ಅತ್ಯಂತ ಕಡಿಮೆ ಇದೆ. ಪ್ರತಿ ಸಾವಿರ ಕಿ.ಮೀ. ವಿಸ್ತೀರ್ಣಕ್ಕೆ ತಮಿಳುನಾಡಿನಲ್ಲಿ 31.8 ಕಿ.ಮೀ., ಅಂಗೈಯಷ್ಟಗಲದ ಪುಟ್ಟ ರಾಜ್ಯ ಕೇರಳದಲ್ಲಿ 27 ಕಿ.ಮೀ., ಅವಿಭಜಿತ ಆಂಧ್ರಪ್ರದೇಶದಲ್ಲಿ 18.8 ಕಿ.ಮೀ. ಉದ್ದದ ರೈಲು ಮಾರ್ಗಗಳಿವೆ. ಕರ್ನಾಟಕ ಮಾತ್ರ ಪ್ರತಿ ಒಂದು ಸಾರ ಕಿ.ಮೀ. ವಿಸ್ತೀರ್ಣಕ್ಕೆ ಕೇವಲ 16.9 ಕಿ.ಮೀ. ರೈಲು ಮಾರ್ಗ ಹೊಂದಿದೆ.

* ಇತ್ತೀಚೆಗಷ್ಟೇ ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿಗೆ ರೈಲು ಸಂಪರ್ಕ ಕಲ್ಪಿಸಿದ್ದರೆ, ಕೊಡಗು ಜಿಲ್ಲೆ ಜನ ಇನ್ನೂ ರೈಲು ಕಾಣಲಿಲ್ಲ.

* ಅತ್ಯಂತ ವೈಭವೋಪೇತ ಪ್ರವಾಸಿ ತಾಣಗಳನ್ನು ಹೊಂದಿರುವ ರಾಜ್ಯದಲ್ಲಿ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರೈಲು ಮಾರ್ಗವೇ ಇಲ್ಲ.

ಆಗಬೇಕಾದ್ದೇನು?
* ಸದಾನಂದಗೌಡರು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗಲೇ ಬೆಂಗಳೂರಿನ ಏಳೆಂಟು ಮೂಲೆಗೆ ಚಾಚಿಕೊಂಡಿರುವ ತಮ್ಮ ಕ್ಷೇತ್ರದುದ್ದಕ್ಕೂ ಸಂಚರಿಸುವ ಉಪನಗರ ರೈಲು ಯೋಜನೆ ಅನುಷ್ಠಾನ ಮಾಡುವುದೇ ತಮ್ಮ ಆದ್ಯತೆ ಎಂದಿದ್ದರು. ರಾಜಧಾನಿಯನ್ನು ಉತ್ತರ ಕರ್ನಾಟಕ, ತಮಿಳುನಾಡು, ಆಂಧ್ರ, ಹಳೆ ಮೈಸೂರು, ಕರಾವಳಿ, ಮಲೆನಾಡು ಹೀಗೆ ಎಲ್ಲಾ ದಿಕ್ಕಿನಿಂದ ಪ್ರವೇಶಿಸುವ ದ್ವಾರಬಾಗಿಲುಗಳು ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಇವೆ. ಉಪನಗರ ರೈಲೊಂದನ್ನು ನೀಡಿದರೆ ಸದಾನಂದಗೌಡರನ್ನು ಗೆಲ್ಲಿಸಿದ್ದಕ್ಕೆ ಸಾರ್ಥಕವಾಗುತ್ತದೆ.

* ಎಲ್ಲಾ ಪ್ರಮುಖ ಪ್ರವಾಸಿ ತಾಣಗಳನ್ನು ಸಂಪರ್ಕಿಸಿ, ಅಭಿವೃದ್ಧಿಗೆ ಕೊಂಡಿಯಾಗುವ ಹೊಸ ರೈಲ್ವೆ ಕಾರಿಡಾರ್‌ಗೆ ಆದ್ಯತೆ ನೀಡಿದರೆ ರಾಜ್ಯದ ಚಿತ್ರಣವೇ ಬದಲಾಗುತ್ತದೆ.

* ಬೆಂಗಳೂರಿನಿಂದ ಶಿವಮೊಗ್ಗ-ತಾಳಗುಪ್ಪ ಮಾರ್ಗವಾಗಿ ಕೊಂಕಣ ರೈಲು ಸಂಪರ್ಕಿಸುವ ಹೊಸ ಮಾರ್ಗವೊಂದು ನಿರ್ಮಾಣವಾದರೆ ಪ್ರಯಾಣದ ಅವಧಿ ಅರ್ಧದಷ್ಟು ಕಡಿಮೆಯಾಗಲಿದೆ. ಗೋವಾ, ಮಹಾರಾಷ್ಟ್ರದ ಪ್ರಯಾಣಕ್ಕೆ ಹತ್ತಿರದ ಮಾರ್ಗ ಸೃಜನೆಯಾಗಿ, ಪ್ರವಾಸೋದ್ಯಮಕ್ಕೆ ನೆರವಾಗಲಿದೆ.

* ಬೆಂಗಳೂರಿನಿಂದ ಮಂಗಳೂರು ತಲುಪಲು 506 ಕಿ.ಮೀ ಸಾಗಬೇಕು. ಅಲ್ಲಿಂದ ಕುಮಟಾ ತಲುಪಲು 80 ಕಿ.ಮೀ. ಕ್ರಮಿಸಬೇಕು. ಇದರ ಬದಲು ಶಿವಮೊಗ್ಗ-ತಾಳಗುಪ್ಪ-ಸಿದ್ದಾಪುರ-ದೊಡ್ಡಮನೆ-ಕುಮಟಾ ಮಾರ್ಗ ನಿರ್ಮಿಸಿದರೆ 370 ಕಿ.ಮೀ. ಪ್ರಯಾಣದಲ್ಲಿ ಕೊಂಕಣ ರೈಲ್ವೆ ಹಿಡಿಯಬಹುದು. ಪ್ರಸ್ತಾಪಿತ ಹೊಸ ಮಾರ್ಗ ನಿರ್ಮಾಣಕ್ಕೆ ಅರಣ್ಯ ಇಲಾಖೆ ತಗಾದೆಯೂ ಕಡಿಮೆ, ಕೇವಲ 3 ಕಿ.ಮೀ. ಸುರಂಗ ಕೊರೆದರೆ ಅರಣ್ಯ ಕ್ಯಾತೆಯನ್ನೂ ತಪ್ಪಿಸಬಹುದು.

* ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗ ಬಹಳ ವರ್ಷದ ಬೇಡಿಕೆ. ಪ್ರಾಚ್ಯವಸ್ತು ಇಲಾಖೆ ತಗಾದೆಯಿಂದ ಅದು ನೆನೆಗುದಿಗೆ ಬಿದ್ದಿದೆ. ಬೆಂಗಳೂರು-ಹಾಸನ ರೈಲು ಮಾರ್ಗಕ್ಕೆ ಕುಣಿಗಲ್ ಸ್ಕಡ್ ಫಾರಂ ಅಡ್ಡಿಯಾಗಿದೆ. ಇವೆರಡನ್ನೂ ಬಗೆಹರಿಸುವ ಯೋಜನೆ ಕೈಗೆತ್ತಿಕೊಳ್ಳಬೇಕಿದೆ.

* 10 ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಅನುಷ್ಠಾನವಾಗದೇ ಇರುವ ಹುಬ್ಬಳ್ಳಿ-ಅಂಕೋಲಾ, ಗದಗ-ಹಾವೇರಿ, ಆಲಮಟ್ಟಿ-ಕೊಪ್ಪಳ, ಬಿಜಾಪುರ-ಶಹಬಾದ್, ಬಿಜಾಪುರ-ಗದಗ ಬ್ರಾಡ್‌ಗೇಜ್ ಮಾರ್ಗಗಳಿಗೆ ಆದ್ಯತೆ ಮೇರೆಗೆ ಹೆಚ್ಚಿನ ಅನುದಾನ ನೀಡಬೇಕು.

* ಹೊಸ ರೈಲುಮಾರ್ಗ ಘೋಷಿಸುವುದಕ್ಕೆ ಸೀಮಿತವಾಗದೆ ಅರಣ್ಯ ಇಲಾಖೆ ಸೇರಿದಂತೆ ನಾನಾ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಕೊಡಿಸಿ, ಯೋಜನೆ ತ್ವರಿತಗತಿಯ ಅನುಷ್ಠಾನಕ್ಕೆ ಜವಾಬ್ದಾರಿಯಾಗುವ ಹೊಣೆಯನ್ನೂ ರೈಲ್ವೆ ಇಲಾಖೆ ಉತ್ತರದಾಯಿಯಾಗಬೇಕು.

* ಬೆಂಗಳೂರು-ಗುಲ್ಬರ್ಗಾ ರಾತ್ರಿ ರೈಲು, ಬಳ್ಳಾರಿ-ಬೆಂಗಳೂರು-ಮೈಸೂರು, ಮಂಗಳೂರು-ಅಹಮದಾಬಾದ್, ಬೆಂಗಳೂರು-ವಾರಾಣಸಿ ರೈಲು ಓಡಿಸಲು ಕ್ರಮವಾಗಬೇಕು.
**

ಜನರ ಹಾರುವ ಕನಸು
ಜಿ.ಎಂ.ಸಿದ್ದೇಶ್ವರ, ನಾಗರಿಕ ವಿಮಾನಯಾನ ಸಹಾಯಕ ಸಚಿವ

* ಆರ್‌. ತುಳಸೀಕುಮಾರ್
ನಾಗರಿಕ ವಿಮಾನಯಾನ ಖಾತೆಗೂ ರಾಜ್ಯಕ್ಕೂ ಅವಿನಾಭಾವ ಸಂಬಂಧ ಇದೆ. ಈ ಹಿಂದೆ ರಾಜ್ಯದ ಸಿ.ಎಂ.ಇಬ್ರಾಹಿಂ ಹಾಗೂ ಅನಂತಕುಮಾರ್ ನಾಗರಿಕ ವಿಮಾನಯಾನ ಸಚಿವರಾಗಿ ಕಾರ‌್ಯನಿರ್ವಹಿಸಿದ್ದಾರೆ. ಆ ಇಬ್ಬರ ಅವಧಿಯಲ್ಲೂ ಕರ್ನಾಟಕಕ್ಕೆ ಅನುಕೂಲ ಆಗಿತ್ತು. ಇದೀಗ ಜಿ.ಎಂ.ಸಿದ್ದೇಶ್ವರ ಅವರಿಗೂ ಇದೇ ಖಾತೆ ದೊರೆತಿರುವುದರಿಂದ ಸದ್ಬಳಕೆ ಮಾಡಿಕೊಳ್ಳಲು ಎಲ್ಲಾ ಅವಕಾಶಗಳು ಇವೆ.

ಆಗಬೇಕಾದ್ದೇನು?
* ದಕ್ಷಿಣ ಭಾರತದಲ್ಲಿ ಚೆನ್ನೈ ಹೊರತುಪಡಿಸಿ ಕೆಂಪೇಗೌಡ ವಿಮಾನ ನಿಲ್ದಾಣ ಹೆಚ್ಚು ಪ್ರಯಾಣಿಕರನ್ನು ಸೆಳೆಯುತ್ತಿದೆ. 2020ರ ವೇಳೆಗೆ ಈಗಿನ ಸಂಖ್ಯೆಗೆ ದುಪ್ಪಟ್ಟಾಗಲಿದ್ದು, ಎರಡನೆಯ ರನ್‌ವೇ ಸಿದ್ಧಗೊಳ್ಳಲಿದ್ದು, ನಾನಾ ಸೌಲಭ್ಯ ಹಾಗೂ ಮೂಲಸೌಕರ‌್ಯ ಅಗತ್ಯ ಇದೆ. ವಿಮಾನಯಾನ ಸಚಿವಾಲಯದ ಸಹಕಾರ ಇಲ್ಲದೆ ಇಂತಹ ಪ್ರಸ್ತಾವನೆಗಳು ತ್ವರಿತವಾಗಿ ಕಾರ‌್ಯಗತ ಆಗದು. ಇದು ಸೇರಿದಂತೆ ರಾಜ್ಯದ 2ನೇ ಹಾಗೂ 3ನೇ ಹಂತದ ನಗರಗಳಿಗೂ ವಿಮಾನಯಾನ ಸೇವೆ ವಿಸ್ತರಿಸಲು ಸಚಿವರು ಪ್ರಯತ್ನಿಸಬಹುದು.

* ದೀರ್ಘ ಕಾಲದಿಂದ ನನೆಗುದಿಗೆ ಬಿದ್ದಿರುವ ಗುಲ್ಬರ್ಗ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆ ಚಾಲನೆಗೆ ಹಸಿರುನಿಶಾನೆ. ವಿಶ್ವ ಪರಂಪರೆ ಪಟ್ಟಿಗೆ ಸೇರಿರುವ ಹಂಪಿಗೆ ವಿದೇಶಿ ಸಹಿತ ದೊಡ್ಡ ಮಟ್ಟದಲ್ಲಿ ಪ್ರವಾಸಿಗರ ಆಕರ್ಷಣೆಗೆ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ. ನಾನಾ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ, ಏರ್‌ಸ್ಟ್ರಿಪ್, ಹೆಲಿಪ್ಯಾಡ್ ನಿರ್ಮಾಣಕ್ಕೆ ಅನುಮೋದನೆ ಪಡೆಯಬೇಕಿದೆ.

* ವರ್ಷಗಳಿಂದ ಬಾಕಿ ಇರುವ, ರಾಜ್ಯದಲ್ಲಿ ವೈಮಾನಿಕ ಸಂಸ್ಥೆಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಅನುದಾನ.

* ಚಿತ್ರದುರ್ಗದಲ್ಲಿ ಡಿಆರ್‌ಡಿಒ ಯೋಜನೆ ಆರಂಭಕ್ಕೆ ಚುರುಕು.

* ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ವೈಮಾನಿಕ ಪಾರ್ಕ್ ಸ್ಥಾಪಿಸುವ ಎಸ್‌ಇಝೆಡ್ ಕೂಡ ಘೋಷಣೆಗೆ ಸೀಮಿತವಾಗಿದ್ದು, ಕಾರ‌್ಯರೂಪಕ್ಕೆ ತರಲು ಪ್ರಯತ್ನಿಸಬೇಕಿದೆ.

* ದೇಶದಲ್ಲಿ 2017-18ರ ವೇಳೆಗೆ ಈಗಿನ ಸರಕು ಸಾಗಣೆ ಪ್ರಗತಿಯನ್ನು ಶೇ.5ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಅನುಗುಣವಾಗಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ) 24 ಏರ್‌ಪೋರ್ಟ್‌ಗಳನ್ನು ದೇಶಿ ಕಾರ್ಗೊ ಟರ್ಮಿನಲ್‌ಗಳಾಗಿ ಅಭಿವೃದ್ಧಿ ಪಡಿಸುವ ಯೋಜನೆ ಹಾಕಿಕೊಂಡಿದೆ. ಈ ಪಟ್ಟಿಗೆ ರಾಜ್ಯದ ನಗರಗಳನ್ನು ಸೇರ್ಪಡೆ ಮಾಡಿಕೊಳ್ಳಬಹುದು. ಜತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣ ಅಭಿವೃದ್ಧಿ ಹಾಗೂ ಏರೋನಾಟಿಕಲ್ ಕ್ಷೇತ್ರದ ವಸ್ತು ಸಂಗ್ರಹಾಲಯ, ತರಬೇತಿ ಕೇಂದ್ರವನ್ನೂ ಆರಂಭಿಸಬಹುದು.
-----

''ಕರ್ನಾಟಕ ಸರಕಾರ ಬಯಸುವ ಯೋಜನೆಗಳಿಗೆ ಎಲ್ಲ ರೀತಿಯ ಸಹಕಾರ ನೀಡಲು ಕೇಂದ್ರ ಬದ್ಧವಾಗಿದೆ. ತವರು ರಾಜ್ಯಕ್ಕೆ ಹೆಚ್ಚಿನ ಮುತುವರ್ಜಿ ವಹಿಸಲು ಸಿದ್ಧನಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಏರ್‌ಪೋರ್ಟ್ ಸ್ಥಾಪಿಸುವ ಚಿಂತನೆ ನಡೆದಿದೆ. ಶಿವಮೊಗ್ಗ ಹಾಗೂ ಗುಲ್ಬರ್ಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ರಾಜ್ಯ ಸರಕಾರ ಸ್ಪಷ್ಟ ಮಾಹಿತಿ ಒಳಗೊಂಡ ಪ್ರಸ್ತಾವನೆ ಸಲ್ಲಿಸಿದರೆ ಅಗತ್ಯ ಕ್ರಮ ಕೈಗೊಳ್ಳುವೆ. ಈ ಕುರಿತು ಸಿಎಂಗೆ ಪತ್ರ ಬರೆದಿದ್ದು, ಈವರೆಗೂ ಸರಕಾರದಿಂದ ಪ್ರಸ್ತಾವನೆ ಸಲ್ಲಿಕೆ ಆಗಿಲ್ಲ. ಪ್ರಸ್ತಾವನೆ ಸಲ್ಲಿಸದ ಹೊರತು ತಮ್ಮ ಸಚಿವಾಲಯದಿಂದ ಸ್ವಯಂ ನಿರ್ಧಾರ ಕೈಗೊಳ್ಳಲಾಗದು.''
* ಜಿ.ಎಂ.ಸಿದ್ದೇಶ್ವರ, ನಾಗರಿಕ ವಿಮಾನಯಾನ ಸಹಾಯಕ ಸಚಿವ
**

ಬಂದೀತೇ ರಸಗೊಬ್ಬರ ಕಾರ್ಖಾನೆ?
ಎಚ್.ಎನ್. ಅನಂತಕುಮಾರ್, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ

* ಶಶಿಧರ್ ನಂದಿಕಲ್
ರಾಜ್ಯದಲ್ಲಿ ಪ್ರಥಮ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸಿದ್ದ ಬಿಜೆಪಿ ಸರಕಾರದ ಅವಧಿಯಲ್ಲೇ ರಸಗೊಬ್ಬರಕ್ಕಾಗಿ ರೈತರು ದಂಗೆ ಎದ್ದಿದ್ದರು. ಹಾವೇರಿ ಗೋಲಿಬಾರ್ ಘಟನೆಗೂ ಬಿಜೆಪಿ ಆಡಳಿತಾವಧಿ ಸಾಕ್ಷಿಯಾಗಿತ್ತು. ಇದೀಗ ರಾಜ್ಯ ಬಿಜೆಪಿಯ ಹಿರಿಯ ನಾಯಕ ಎಚ್.ಎನ್. ಅನಂತಕುಮಾರ್, ಕೇಂದ್ರ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದಾರೆ.ಈ ಹೋಲಿಕೆ ಕಾಕತಾಳೀಯ ಎನ್ನಬಹುದಾದರೂ ಅನಂತಕುಮಾರ್ ಅವರು ವಹಿಸಿಕೊಂಡಿರುವ ಈ ಮಂತ್ರಾಲಯವು ಕೃಷಿ ಕ್ಷೇತ್ರದ ಔನ್ನತ್ಯ ಹಾಗೂ ಜನರ ಆರೋಗ್ಯ ಭಾಗ್ಯಕ್ಕೆ ದಿವ್ಯ ಔಷಧ ನೀಡುವ ದೃಷ್ಟಿಯಿಂದ ನೇರ ಸಂಬಂಧ ಹೊಂದಿದೆ. ಹೀಗಾಗಿ ಅನಂತಕುಮಾರ್ ಅವರಿಂದ ರಾಜ್ಯದ ಮಣ್ಣಿನ ಮಕ್ಕಳು ಹೆಚ್ಚಿನ ನಿರೀಕ್ಷೆ ಮಾಡಬಹುದಾಗಿದೆ. ಹಾಗೆಯೇ ಔಷಧ ಉದ್ಯಮಕ್ಕೆ ಉತ್ತೇಜನ ಅಪೇಕ್ಷಿಸಬಹುದಾಗಿದೆ. ರಾಜ್ಯ ಸರಕಾರದ ಚಿಂತನೆಯಲ್ಲಿ ಇರುವ ಜನೌಷಧ ಮಳಿಗೆಗಳು (ಜನರಿಕ್ ಡ್ರಗ್ಸ್) ಪ್ರಾರಂಭವಾಗುವ ವಿಶ್ವಾಸ ಇರಿಸಿಕೊಳ್ಳಬಹುದಾಗಿದೆ.

ಆಗಬೇಕಾದ್ದೇನು?
* ಖಾಸಗಿ ಒಡೆತನದ ಎಂಸಿಎಫ್ ಹೊರತು ಪಡಿಸಿದರೆ ರಾಜ್ಯದಲ್ಲಿ ಯಾವುದೇ ರಸಗೊಬ್ಬರ ಕಾರ್ಖಾನೆಗಳು ಇಲ್ಲ. ಹೀಗಾಗಿ ರಾಜ್ಯ ಸರಕಾರದ ಸಹಯೋಗದೊಂದಿಗೆ ಬೃಹತ್ ಉತ್ಪಾದಕ ಸಾಮರ್ಥ್ಯದ ಕಾರ್ಖಾನೆ ತೆರೆಸಬಹುದು. ಪ್ರಮುಖವಾಗಿ ದಕ್ಷಿಣ ಭಾರತದಲ್ಲೆ ಇಂಥದೊಂದು ಸೌಕರ್ಯವಿಲ್ಲ. ಈ ಕೊರತೆ ನೀಗಿಸಲು ಕರ್ನಾಟಕವನ್ನು ಕೇಂದ್ರವಾಗಿಸಿಕೊಂಡು 'ಸೌತ್ ಇಂಡಿಯ ಫರ್ಟಿಲೈಸರ್ ಹಬ್' ನಿರ್ಮಿಸಬಹುದು.

* ಭವಿಷ್ಯದ ದೃಷ್ಟಿಯಿಂದ ರಸಗೊಬ್ಬರ ಪೂರೈಕೆಗೆ ಸ್ಪಷ್ಟ ನೀತಿ ರೂಪಿಸುವುದರ ಜತೆಗೆ ರಾಜ್ಯಕ್ಕೆ ಹೆಚ್ಚಿನ ಸಬ್ಸಿಡಿ ಕೊಡಿಸಬಹುದು.

* ಕಸ, ಘನ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರ ತಯಾರಿಸಲು ತಂತ್ರಜ್ಞಾನ ಒದಗಿಸುವ ಕೆಎಸ್‌ಸಿಡಿಸಿ ಸಂಸ್ಥೆ ರಾಜ್ಯದಲ್ಲಿದ್ದರೂ ಇದರ ಸಾಮರ್ಥ್ಯ ಸೀಮಿತ ಮಟ್ಟದಲ್ಲಿದೆ. ಬೆಂಗಳೂರು ಸೇರಿದಂತೆ ಮಹಾನಗರಗಳ ಕಸವನ್ನು ರಸವಾಗಿಸಲು ಸರಕಾರಿ ಸ್ವಾಮ್ಯದ ಇಂಥ ಉದ್ದಿಮೆಗಳಿಗೆ ನೆರವಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ, ಮಂಗಳೂರಿನಂತಹ ನಗರಗಳಲ್ಲಿ ಘಟಕ ಆರಂಭಿಸಲು ಕೇಂದ್ರದಿಂದ ಅನುದಾನ ಕೊಡಿಸಬಹುದು.

* ರಸಗೊಬ್ಬರ ದಾಸ್ತಾನಿಗೆ ಗೋದಾಮುಗಳ ಕೊರತೆಯಿದೆ. ಈ ಸಮಸ್ಯೆ ನಿವಾರಿಸಲು ವಲಯವಾರು ಗೋದಾಮು ನಿರ್ಮಿಸಲು ರಾಜ್ಯಕ್ಕೆ ಅನುದಾನ ಕೊಡಿಸಬಹುದು. ಮುಂದಿನ ಹಂತದಲ್ಲಿ ಪ್ರತಿ ಜಿಲ್ಲೆಯಲ್ಲಿ ಗೋದಾಮು ತೆರೆಯಲು ಅನುಕೂಲ ಕಲ್ಪಿಸಬಹುದು.

* ಜಿಲ್ಲಾ ಆಸ್ಪತ್ರೆಗಳಲ್ಲಿ ಜನೌಷಧ ಮಳಿಗೆ (ಜನರಿಕ್ ಡ್ರಗ್ಸ್) ಆರಂಭಿಸುವ ಪ್ರಸ್ತಾವನೆ ಈಗಾಗಲೇ ಇದೆ. ತಕ್ಷಣಕ್ಕೆ ಈ ಸೌಲಭ್ಯಕ್ಕೆ ಚಾಲನೆ ಕೊಡಿಸಬೇಕು.

* ಪಶ್ಚಿಮಘಟ್ಟ ಪ್ರದೇಶದಲ್ಲಿ ಹಾವು ಕಡಿತದಿಂದ ರೈತರು ಮರಣ ಹೊಂದುವ ಪ್ರಕರಣ ಜಾಸ್ತಿ. ಇದಕ್ಕೆ ಕೊಡಲಾಗುವ ಆಂಟಿ ವೇನಮ್ (Anti Venom) ಔಷಧವನ್ನು ಹೊರ ದೇಶದಿಂದ ತರಿಸಿಕೊಳ್ಳುವ ಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಈ ಔಷಧವನ್ನು ಸ್ಥಳೀಯವಾಗಿ ಸಿದ್ಧಪಡಿಸಲು ಅಗತ್ಯ ತಂತ್ರಜ್ಞಾನ, ಕಚ್ಚಾ ಸಾಮಗ್ರಿ ಒದಗಿಸಲು ಕ್ರಮ ಕೈಗೊಳ್ಳಬಹುದು.

* ಫಾರ್ಮಾಸ್ಯುಟಿಕಲ್ ಕಂಪನಿಗಳು ಹೆಚ್ಚಿನಂಶ ಹಿಮಾಚಲ ಪ್ರದೇಶ, ಮುಂಬಯಿಯಲ್ಲಿ ನೆಲೆ ಕಂಡುಕೊಂಡಿವೆ. ಅಂತಹ ಕಂಪನಿಗಳನ್ನು ರಾಜ್ಯದತ್ತ ಆಕರ್ಷಿಸಬಹುದು. ಇಂಥ ಕಂಪನಿಗಳ ಮೂಲಕ ಬಯೊ ಟೆಕ್ನಾಲಜಿಗೂ ಸೂಕ್ತ ವೇದಿಕೆ ಕಲ್ಪಿಸಬಹುದು. ಈ ಕುರಿತ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳನ್ನು ತೆರೆಸಬಹುದು. ಇದರಿಂದ ಬಿಟಿಯಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಮಾಡಿದವರ ಪ್ರತಿಭೆ ಬಳಸಿಕೊಳ್ಳಬಹುದು.

* ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಷನ್ ಆ್ಯಂಡ್ ರಿಸರ್ಚ್‌ನಂತಹ (ಎನ್‌ಐಪಿಇಆರ್) ಪ್ರತಿಷ್ಠಿತ ಸಂಸ್ಥೆಯ ಘಟಕವನ್ನು ರಾಜ್ಯದ ಹುಬ್ಬಳ್ಳಿ-ಧಾರವಾಡದಂತಹ ಎರಡನೇ ಹಂತದ ನಗರಗಳಲ್ಲಿ ಪ್ರಾರಂಭ ಮಾಡಬಹುದು.
-----

ಜನೌಷಧ ಮಳಿಗೆಗೆ ಸಹಕಾರ
''ರಾಜ್ಯದ ಮುಖ್ಯಮಂತ್ರಿಗಳು ಭೇಟಿಯಾದಾಗ ಜಿಲ್ಲಾ ಆಸ್ಪತ್ರೆಗಳಲ್ಲಿ ಜನೌಷಧ ಮಳಿಗೆ ತೆರೆಯಲು ಸಹಕರಿಸುವ ಭರವಸೆ ನೀಡಿದ್ದೇನೆ. ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ಜನೌಷಧ ಅಭಿಯಾನ ಪ್ರಾರಂಭಿಸಲು ಕೇಂದ್ರ ಬದ್ಧವಾಗಿದೆ. ರಾಜ್ಯ ಸರಕಾರ ಮುಂದೆ ಬಂದರೆ ರಸಗೊಬ್ಬರ ಕಾರ್ಖಾನೆ ಆರಂಭಿಸಲಾಗುವುದು. ಎಸ್‌ಇಜೆಡ್ ಮಾದರಿಯಲ್ಲಿ ಪೆಟ್ರೊ ಕೆಮಿಕಲ್ಸ್ ಮತ್ತು ಕೆಮಿಕಲ್ಸ್ ಉತ್ಪನ್ನ ತಯಾರಿಕೆಗೆ ಬಂಡವಾಳ ಆಕರ್ಷಿಸುವುದಾಗಿ ತಿಳಿಸಲಾಗಿದೆ. ಐಐಟಿಗೆ ಸಮನಾದ ನೈಪರ್‌ನಂತಹ ಸಂಸ್ಥೆಯನ್ನೂ ರಾಜ್ಯಕ್ಕೆ ತರಲಾಗುವುದು. ಪ್ರಧಾನಿಯವರ ಕಲ್ಪನೆಯಂತೆ ಮಹಾನಗರಗಳ ತ್ಯಾಜ್ಯದಿಂದ ಕಾಂಪೋಸ್ಟ್ ತಯಾರಿಸಲು ನೆರವು ನೀಡಲಾಗುವುದು. ಇದಕ್ಕೆ ರಾಜ್ಯ ಸರಕಾರ, ಸ್ಥಳೀಯ ಆಡಳಿತಗಳು ಆಸಕ್ತಿ ವಹಿಸಬೇಕಾಗುತ್ತದೆ,''
* ಎಚ್.ಎನ್. ಅನಂತಕುಮಾರ್, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ
**

ನಗರೀಕರಣದ ಸವಾಲು
ಎಂ.ವೆಂಕಯ್ಯನಾಯ್ಡು, ಕೇಂದ್ರ ನಗರಾಭಿವೃದ್ಧಿ ಸಚಿವ

* ಸುದರ್ಶನ್ ಚನ್ನಂಗಿಹಳ್ಳಿ
ಎಂ.ವೆಂಕಯ್ಯನಾಯ್ಡು ಅವರು ಆಂಧ್ರದವರಾದರೂ ರಾಜ್ಯದಿಂದ 2ನೇ ಬಾರಿಗೆ ರಾಜ್ಯಸಭೆ ಸದಸ್ಯರಾಗಿದ್ದಾರೆ. ಹೀಗಾಗಿ ಅವರೂ ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು. ಸಂಪುಟ ದರ್ಜೆಯ ನಗರಾಭಿವೃದ್ಧಿ ಖಾತೆ ಹೊಂದಿರುವ ಅವರ ಸಚಿವಾಲಯದಿಂದ ರಾಜ್ಯಕ್ಕೆ ಭಾರೀ ಕೊಡುಗೆ ಸಿಗಬಹುದು, ಇದಕ್ಕೆ ಪೂರಕವಾಗಿ ನಾಯ್ಡು ಅವರು ಸ್ಪಂದಿಸಬಹುದು ಎಂಬ ನಿರೀಕ್ಷೆಗಳಿವೆ. ನಗರೀಕರಣ ಬಹುದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ. ಗ್ರಾಮೀಣರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ವಲಸೆ ಬರುತ್ತಿರುವುದರಿಂದ ನಗರ ಮತ್ತು ಪಟ್ಟಣಗಳಲ್ಲಿ ಕುಡಿವ ನೀರು, ವಸತಿ, ಸಾರಿಗೆ ಮೊದಲಾದ ಮೂಲಸೌಕರ್ಯಗಳ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿವೆ. ಬೆಂಗಳೂರು ಸೇರಿ ರಾಜ್ಯದ ಎಲ್ಲ ಪ್ರಮುಖ ನಗರಗಳು, ದೊಡ್ಡ ಮತ್ತು ಸಣ್ಣ ಪಟ್ಟಣಗಳು ಕುಡಿವ ನೀರು, ಗುಣಮಟ್ಟವಲ್ಲದ ರಸ್ತೆ, ನೈರ್ಮಲ್ಯ ಸಮಸ್ಯೆ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿವೆ.

ಆಗಬೇಕಾದ್ದೇನು?
1. ನರ್ಮ್ ಯೋಜನೆಯಡಿ ರಾಜ್ಯದ ಮಹಾನಗರಗಳ ಮೂಲಸೌಕರ್ಯ ಅಭಿವೃದ್ಧಿಗೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸುವುದು.

2. ಬೆಂಗಳೂರು, ಮೈಸೂರು ಜತೆಗೆ ರಾಜ್ಯದ ಇತರ ಪ್ರಮುಖ ನಗರಗಳಿಗೂ ನರ್ಮ್ ಯೋಜನೆ ವಿಸ್ತರಿಸುವುದು.

3. ಸಣ್ಣ ಮತ್ತು ಮಧ್ಯಮ ಪಟ್ಟಣಗಳಿಗೆ ಕುಡಿವ ನೀರು, ಒಳಚರಂಡಿ ಮೊದಲಾದ ಮೂಲಸೌಕರ್ಯಕ್ಕೆ ನೀಡುತ್ತಿರುವ ಅನುದಾನ ಹೆಚ್ಚಳ

4. ನಗರ ಸಾರಿಗೆ ವ್ಯವಸ್ಥೆ ಸುಗಮಗೊಳಿಸಲು ತಾಂತ್ರಿಕ ಹಾಗೂ ಆರ್ಥಿಕ ನೆರವು ನೀಡುವುದು. ಮಾಲಿನ್ಯ ಪ್ರಮಾಣ ತಗ್ಗಿಸಲು ಸಿಎನ್‌ಜಿ ಬಸ್‌ಗಳನ್ನು ಒದಗಿಸುವುದು.

5. ನಗರಗಳಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಸಿಗ್ನಲ್ ಮುಕ್ತ ರಸ್ತೆ ನಿರ್ಮಾಣಕ್ಕೆ ನೆರವು ನೀಡುವುದು, ಎಲಿವೇಟೆಡ್ ಮೇಲುರಸ್ತೆಗಳ ನಿರ್ಮಾಣ ಸಹಾಯಹಸ್ತ ಚಾಚುವುದು.

6. ಬೆಂಗಳೂರು ಸೇರಿ ಎಲ್ಲ ನಗರಗಳಲ್ಲಿಯೂ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿದೆ. ತ್ಯಾಜ್ಯ ಸಂಸ್ಕರಣೆಗೆ ಅತ್ಯಾಧುನಿಕ ತಂತ್ರಜ್ಞಾನ ಒದಗಿಸುವುದು. ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಆರಂಭಿಕ ಆರ್ಥಿಕ ನೆರವು ನೀಡುವುದು. ತ್ಯಾಜ್ಯದಿಂದ ವಿದ್ಯುತ್, ಬಯೋಗ್ಯಾಸ್ ಸೇರಿದಂತೆ ಇತರೆ ಶಕ್ತಿ ಉತ್ಪಾದನೆಯ ತಾಂತ್ರಿಕತೆ ನೀಡುವುದು.

7. ಬೆಂಗಳೂರು ಮೆಟ್ರೊ ಯೋಜನೆ ಸೇವೆ ಜನರಿಗೆ ತ್ವರಿತವಾಗಿ ಸಿಗುವಂತೆ ಮಾಡಲು ಕೇಂದ್ರ ಸರಕಾರವೂ ಹೆಚ್ಚಿನ ಅನುದಾನ ಒದಗಿಸುವುದು. ಯೋಜನೆ ವಿಸ್ತರಿಸಲು ಅನುಮತಿ ನೀಡುವುದು. ಮೆಟ್ರೊ ಜತೆಗೆ ಮೋನೋ ರೈಲು ಸೇವೆ ಒದಗಿಸಲು ನೆರವಾಗುವುದು.

8. ಹುಬ್ಬಳ್ಳಿ, ಮೈಸೂರು, ಮಂಗಳೂರು ಸೇರಿ ಇತರ ಮಹಾನಗರಗಳಿಗೂ ಮೆಟ್ರೊ ಇಲ್ಲವೇ ಮೋನೋ ರೈಲು ಯೋಜನೆ ಮಂಜೂರು ಮಾಡಿಕೊಡುವುದು.

9. ಕೊಳೆಗೇರಿ ನಿವಾಸಿಗಳಿಗೆ ಸುಭದ್ರ ಸೂರು ಒದಗಿಸಲು ಸಕಲ ಸೌಕರ್ಯ ಇರುವ ಸುಸಜ್ಜಿತ ವಸತಿ ಸಮುಚ್ಛಯಗಳನ್ನು ನಿರ್ಮಿಸಿಕೊಡುವುದು. ರಾಜೀವ್‌ಗಾಂಧಿ ನಗರ ವಸತಿ ಯೋಜನೆಯಡಿ ರಾಜ್ಯಕ್ಕೆ ಸಿಂಹಪಾಲು ನೆರವು ದೊರಕಿಸಿಕೊಡುವುದು.

10. ದೇಶದ ಆಯ್ದ ಮಹಾನಗರಗಳಲ್ಲಿ ಸೆಟಲೈಟ್ ಟೌನ್‌ಗಳನ್ನು ಸ್ಥಾಪಿಸಿ ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಸರಕಾರದಿಂದ ಸಿಗುತ್ತಿರುವ ಯೋಜನೆಯನ್ನು ರಾಜ್ಯಕ್ಕೂ ನೀಡುವುದು.
ಲೇಖನಕ್ಕೆ ಅನಿಸಿಕೆಗಳಿವೆ.ಬೇರೆ ಓದುಗರ ಅನಿಸಿಕೆಗಳನ್ನು ಓದಿಮತ್ತುನಿಮ್ಮ  ಅನಿಸಿಕೆಗಳನ್ನು ಬರೆಯಿರಿ.
ಇವುಗಳೂ ನಿಮಗಿಷ್ಟವಾಗಬಹುದು
  • ಶಾಸಕರಾಗಿ ಬಿ.ವೈ.ರಾಘವೇಂದ್ರ ಪ್ರಮಾಣ
  • ನೂತನ ರಾಜ್ಯಪಾಲರ ಪ್ರಮಾಣ ಸೆ.1ಕ್ಕೆ
  • ದಸರಾ ಬಳಿಕವೇ ಸಂಪುಟ ವಿಸ್ತರಣೆ
  • ಹಬ್ಬದ ಬಳಿಕ ಸಂಪುಟ ವಿಸ್ತರಣೆ ಖಚಿತ
  • ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗಿ: ದಿಗ್ವಿಜಯ್ ಸೂಚನೆ
  • ಡಿಸಿಎಂ ಹುದ್ದೆ ಹೈಕಮಾಂಡ್ ಮಧ್ಯೆ ಪ್ರವೇಶವಿಲ್ಲ: ದಿಗ್ವಿಜಯ್ ಸಿಂಗ್
  • ಕೈ ಮೇಲು, ಕಮಲ ಸೋಲು: ಸಿಕ್ಕಿದ್ದು ಶಿಕಾರಿ, ಕೈ ಕೊಟ್ಟ ಬಳ್ಳಾರಿ
  • ನಾಳೆ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ
  • ಮೂರು ಕ್ಷೇತ್ರಗಳ ಉಪ ಚುನಾವಣೆ ಮತ ಎಣಿಕೆ ಇಂದು
  • ವಿಧಾನಮಂಡಲದ 15 ಸಮಿತಿಗಳ ರಚನೆ
 
ಇದನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ.
ಇದನ್ನು ಟ್ವೀಟ್ ಮಾಡಿ
Tweet
Post a comment
Email this article
Print this article
Save this article
My saved articles
Reduce font size
Increase font size
ಮುಂದಿನ ಲೇಖನ
ಡಿಕೆಶಿ ಸಹಚರರಿಂದ ಮಾನಸಿಕ ಕಿರುಕುಳ ಆರೋಪ
ಹಿಂದಿನ ಲೇಖನ
ರೈಲ್ವೆ ಬಜೆಟ್: ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡಲಿ: ಖರ್ಗೆ
ಆರೋಗ್ಯ-ಸೌಂದರ್ಯ
  • ಮನೆಮದ್ದು: ಅಮೃತಬಳ್ಳಿ
  • ಆಟಿಸಂಗೆ ಆರೋಗ್ಯಕಾರಿ ಚಿಕಿತ್ಸೆ
  • ಮಕ್ಕಳ ಸಹಜಬಲಕ್ಕೆ ಸ್ವರ್ಣಪ್ರಾಶನ
  • ಕೂದಲ ನಷ್ಟಕ್ಕೆ ಫೈಬ್ರಿನ್ ಮ್ಯಾಟ್ರಿಕ್ಸ್‌ ಚಿಕಿತ್ಸೆ
  • ಕೂದಲಿಗೆ ಅತ್ಯುತ್ತಮ ಆಹಾರ
ಮತ್ತಷ್ಟು>>

ಪ್ರಾಪರ್ಟಿ

  • ಮುಂದಿದೆ ಹಬ್ಬಗಳ ಸಾಲು ಖರೀದಿಸಿ ಕನಸಿನ ಮಹಲು
  • ಮನೆ ಸಾಲ ಎಂಟು ಮಾರ್ಗ
  • ರೆವೆನ್ಯೂ ಸೈಟ್ ಎಚ್ಚರವಿರಲಿ
  • ಡೆವಲಪರ್‌ಗೆ ಲಕ್ಷ್ಮೀಕಟಾಕ್ಷ
  • ಮೊದಲ ತ್ರೈಮಾಸಿಕ ನಾಗಾಲೋಟ
ಮತ್ತಷ್ಟು>>

ಫೋಟೋ ಗ್ಯಾಲರಿ

ಶಾಪಿಂಗ್ ಮಾಡಿ


BlackBerry Curve 8520
Rs: 2490|You Save: 0% 
43 in 1 Card Reader
Rs: 49|You Save: 0% 
ಮತ್ತಷ್ಟು>>
About Us | Advertise with Us | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768